ಮೂಲಭೂತ ಸೌಕರ್ಯ ವಂಚಿತ ವಸತಿ ನಿಲಯ – ತಡರಾತ್ರಿವರೆಗೆ ವಿದ್ಯಾರ್ಥಿಗಳ ಹೋರಾಟ
ತಡರಾತ್ರಿ ವಸತಿ ನಿಲಯಕ್ಕೆ ಭೇಟಿ ನೀಡಿದ ತಾಲೂಕಾ ವಿಸ್ತರಣಾಧಿಕಾರಿ.
ಮೂಲಭೂತ ಸೌಕರ್ಯ ವಂಚಿತ ವಸತಿ ನಿಲಯ – ವಿದ್ಯಾರ್ಥಿಗಳ ಹೋರಾಟ:ತಡರಾತ್ರಿ ವಸತಿ ನಿಲಯಕ್ಕೆ ಭೇಟಿ ನೀಡಿದ ತಾಲೂಕಾ ವಿಸ್ತರಣಾಧಿಕಾರಿ.

ಗಜೇಂದ್ರಗಡ : ಸತ್ಯಮಿಥ್ಯ (ನ -17)
ನಗರದ ಕುಷ್ಟಗಿ ರಸ್ತೆಯ ಸಾಯಿಬಾಬಾ ದೇವಸ್ಥಾನದ ಹತ್ತಿರವಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಸಾಯಂಕಾಲ ಜರುಗಿತು.

ಇಂದು ಮದ್ಯಾಹ್ನ ವಸತಿ ನಿಲಯಕ್ಕೆ ಸಂಬಂದಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ತಾಲೂಕಾ ಅಧಿಕಾರಿಗಳು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಜ್ವರದಿಂದ ಬಳಲುತ್ತಿದ್ದ.ಅದನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅಲ್ಲದೇ ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ, ವಿದ್ಯುತ್ ಸಮಸ್ಯೆ ಇದೆ, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಓದಲಿಕ್ಕೆ ಗ್ರಂಥಾಲಯ ಸಮಸ್ಯೆ ಇದೆ ಎಂದು ಹೇಳಿದರು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಹಾರಿಕೆ ಉತ್ತರ ನೀಡಿ ಅಧಿಕಾರಿಗಳು ತೆರಳಿದ್ದಾರೆ.
ನಂತರ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿಗೆ ಜ್ವರದ ಪ್ರಮಾಣ ಹೆಚ್ಚಾಗಿದ್ದರಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾನೆ. ಇದಕ್ಕೆ ಸಂಬಂಧಪಟ್ಟಂತೆ ವಸತಿ ನಿಲಯದ ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು ಸಹಾ ನೀವೇ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬನ್ನಿ ನಾಳೆ ನೋಡೋಣ ಎಂದು ಹೇಳಿ ಬೇಜವಾಬ್ದಾರಿ ತೋರುತ್ತಿದ್ದಾರೆ. ವಿದ್ಯಾರ್ಥಿಗಳ ಜೀವಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾದರು ಅಧಿಕಾರಿಗಳು ಗಂಭೀರವಾಗಿತೆಗೆದುಕೊಳ್ಳುತ್ತಿಲ್ಲ ನಮ್ಮ ಜೀವಕ್ಕೆ ತೊಂದರೆಯಾದರೆ ಯಾರು ಹೊಣೆ? ಅದಕ್ಕಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರು ಅಥವಾ ಸಚಿವರು ನಮ್ಮ ಸಹಾಯಕ್ಕೆ ಬರಬೇಕು ಎಂದು ಪ್ರತಿಭಟನೆ ಕೈಗೊಂಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ ಎಫ್ ಐ ಸಂಘಟನೆ ಮುಖಂಡ ಚಂದ್ರು ರಾಠೋಡ್. ಈ ವಸತಿ ನಿಲಯ ಸೇರಿದಂತೆ ತಾಲೂಕಿನ ಅನೇಕ ವಸತಿನಿಲಯಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಇದೆ. ಈ ಕುರಿತು ಹಲವಾರು ಬಾರಿ ತಹಸೀಲ್ದಾರ್ ಸೇರಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.ವಿದ್ಯಾರ್ಥಿಗಳ ಜೀವಕ್ಕೆ ಹಾನಿಯಾಗುವಂತ ಘಟನೆಗಳು ಜರುಗುತ್ತಿದ್ದರು ಮಾನವೀಯತೆ ಮರೆತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಈ ಕುರಿತು ಹಾಸ್ಟೆಲ್ ವಾರ್ಡನ್ ಮತ್ತು ತಾಲೂಕಾ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ.ನಾಳೆ ಸಂಜೆ ಒಳಗಾಗಿ ವಸತಿ ನಿಲಯದ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಈ ರೀತಿ ಸುಳ್ಳು ಬರವಸೆಗಳು ಬಹಳಷ್ಟು ಆಗಿವೆ ಎಂದು ವಿದ್ಯಾರ್ಥಿಗಳು ಹೋರಾಟ ಮುಂದುವರೆಸಿದರು. ಹೋರಾಟ ವಿಕೋಪಕ್ಕೆ ತಲುಪುವ ಎಲ್ಲ ಲಕ್ಷಣ ಗೋಚರಿಸುತ್ತಿದಂತೆ ತಡರಾತ್ರಿಗೆ ಹೋರಾಟದ ಸ್ಥಳಕ್ಕೆ ಆಗಮಿಸಿದ ತಾಲೂಕ ವಿಸ್ತರಣಾಧಿಕಾರಿ ಶರಣಪ್ಪ ಗರೇಬಾಳ. ಶೀಘ್ರದಲ್ಲಿ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗುತ್ತೆವೆಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು. ನಂತರ ತಾತ್ಕಾಲಿಕವಾಗಿ ಹೋರಾಟ ವಾಪಸ್ ಪಡೆಯಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ, ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ, ಎಸ್ ಎಫ್ ಐ ತಾಲೂಕ ಅಧ್ಯಕ್ಷರಾದ ಅನಿಲ್ ಆರ್, ಶರಣು ಮಾಟರಂಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು .
ವರದಿ : ಸುರೇಶ. ಬಂಡಾರಿ.




