
ಮನುಷ್ಯನ ಭವಿಷ್ಯ ಧರ್ಮಾಚರಣೆಯಲ್ಲಿದೆ : ಸಚಿವ ಕೆ.ಎನ್.ರಾಜಣ್ಣ.
ನರೇಗಲ್ಲ: ಸತ್ಯಮಿಥ್ಯ (ಅ.೫).
ಮನುಷ್ಯನ ಭವಿಷ್ಯ ಧರ್ಮಾಚರಣೆಯಲ್ಲಿದೆ. ಸತ್ಯವನ್ನು ಯಾವಾಗಲೂ ಮಾತನಾಡಬೇಕು. ಧರ್ಮದಂತೆ ನಡೆಯಬೇಕೆಂದು ಶಾಸ್ತ್ರ ಹೇಳುತ್ತದೆ. ಭಾರತ ದೇಶದಲ್ಲಿ ಇರುವ ಆಧ್ಯಾತ್ಮ ಸಂಪತ್ತು ಬೇರೆಲ್ಲಿಯೂ ಇಲ್ಲ. ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣನವರು ಮಾತನಾಡಿ ತಿಳಿಸಿದರು.
ಅವರು ಅಬ್ಬಿಗೇರಿ ಹಿರೇಮಠದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಇಷ್ಟಲಿಂಗ ಪೂಜಾ ನಂತರ ಶ್ರೀ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಮಾತನಾಡಿದರು.
ಅಬ್ಬಿಗೇರಿ ಗ್ರಾಮ ಚಿಕ್ಕದಾಗಿದ್ದರೂ ಬಹು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಮ್ಮೆಲ್ಲರಿಗೂ ಹರುಷವನ್ನು ಉಂಟು ಮಾಡುತ್ತದೆ. ಶ್ರೀ ರಂಭಾಪುರಿ ಧರ್ಮ ಪೀಠದ ಜಗದ್ಗುರುಗಳು ನಿರಂತರ ಸಂಚರಿಸಿ ಜನ ಮನವನ್ನು ಜಾಗೃತಗೊಳಿಸುತ್ತಿರುವುದು ಭಕ್ತರ ಸೌಭಾಗ್ಯವೆಂದರು. ಇಂದಿನ ದಸರಾ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿತ್ತು ಕಾರಣಾಂತರದಿಂದ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಸಚಿವ ರಾಜಣ್ಣ ತಿಳಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರು ಆಶೀರ್ವಚನ ನೀಡಿ ಸಚಿವರು ಸಂಜೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆನ್ನುವುದು ತಮ್ಮ ಅಭಿಲಾಷೆಯಾಗಿತ್ತು. ಆದಾಗ್ಯೂ ಅವರು ಅಬ್ಬಿಗೇರಿ ಗ್ರಾಮದವರೆಗೆ ಬಂದು ಭೇಟಿ ಮಾಡಿ ಆಶೀರ್ವಾದ ಪಡೆದದ್ದು ತಮಗೆ ಸಮಾಧಾನ ತಂದಿದೆ ಎಂದರು.
ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :ಸಂಗಮೇಶ ಮೆಣಸಗಿ.