
“ಸಂಜೀವಿನಿ ಮಾಸಿಕ ಸಂತೆ” ಮಹಿಳೆಯರ ಸ್ವಾವಲಂಬಿ ಬದುಕಿನ ಅನಾವರಣ.

ಗಜೇಂದ್ರಗಡ:ಸತ್ಯಮಿಥ್ಯ (ಜೂ-25)
ಇಂದು ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಯೋಜನೆಯ ಮಹಿಳಾ ಒಕ್ಕೂಟದ ವ್ಯಾಪ್ತಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವಾರದ ಸಂತೆಯನ್ನು “ಸಂಜೀವಿನಿ ಮಾಸಿಕ ಸಂತೆ” ಶೀರ್ಷಿಕೆ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾಸಿಕ ಸಂತೆಯಲ್ಲಿ ನಿಡಗುಂದಿ ಗ್ರಾಮದ 14 ಜನ ಸಂಜೀವಿನಿ ಒಕ್ಕೂಟಗಳ ಸ್ವ ಸಹಾಯ ಗುಂಪುಗಳಲ್ಲಿ ಸಾಲ ಪಡೆದು ಜೀವನೋಪಾಯ ಚಟುವಟಿಕೆ ಕೈಗೊಂಡಿರುವ ಸದಸ್ಯರಿಗೆ ಮಾರುಕಟ್ಟೆ ಒದಗಿಸಲೆಂದು “ಮಾಸಿಕ ಸಂತೆ” ಆಯೋಜಿಸಲಾಗಿತ್ತು, ಈ ಮಾಸಿಕ ಸಂತೆಯಲ್ಲಿ ಗ್ರಾಮಿಣ ಪ್ರದೇಶದ ಮಹಿಳಾ ಸದಸ್ಯರು ತಯಾರಿಸಿದ “ವಿಭೂತಿ” ಉತ್ಪನ್ನವನ್ನು ಮತ್ತು ಇನ್ನಿತರೆ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಲಭ್ಯವಿರುವಂತೆ ಇಡಲಾಗಿತ್ತು.

“ಸಂಜೀವಿನಿ ಮಾಸಿಕ ಸಂತೆ” ಕಾರ್ಯಕ್ರಮವನ್ನು ಗದಗ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಬಸವರಾಜ ಮೂಲಿಮನಿ ಮತ್ತು ಸಂಜೀವಿನಿ ಯೋಜನೆಯ ಒಕ್ಕೂಟದ ಅಧ್ಯಕ್ಷರು ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.ನಂತರ ಮಾತನಾಡಿದ ಬಸವರಾಜ ಮೂಲಿಮನಿ ಮಹಿಳಾ ಸ್ವಸಹಾಯ ಸಂಘಗಳು ಸ್ತ್ರೀ ಸ್ವಾತಂತ್ರ್ಯದ ಪ್ರತೀಕ. ಮಹಿಳೆ ಸ್ವಸಾಮರ್ಥ್ಯ ತೋರಿಸುವ ವೇದಿಕೆಯಾಗಿ ಕೆಲಸಮಾಡುತ್ತಿವೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಪ್ರೇಮಾ ಇಟಗಿ ಸ್ವಸಹಾಯ ಸಂಘ ಸ್ಥಾಪಿಸಿ ಅನೇಕ ವರ್ಷಗಳು ಗತಿಸಿವೆ ಅಂದು ನೆಟ್ಟ ಸಸಿ ಇಂದು ಮರವಾಗಿ ಬೆಳೆದು ಫಲ ನೀಡುತ್ತಿದೆ. ಸ್ವಸಹಾಯ ಸಂಘದ ಆರ್ಥಿಕ ನೆರವಿನಿಂದ ಬಹುತೇಕ ಸಂಘದ ಮಹಿಳೆಯರಲ್ಲಿ ಧೈರ್ಯ ಹೆಚ್ಚಾಗಿದೆ. ಪ್ರತಿಯೊಬ್ಬರೂ ಬೇರೆಬೇರೆ ಕೌಶಲ್ಯದಲ್ಲಿ ತೊಡಗಿಸಿಕೊಂಡು ಆರ್ಥಿಕ, ಸ್ವಾವಲಂಬಿ ಜೀವನ ಸಾಗಿಸಲು ಪ್ರೇರಣೆಯಾಗಿದೆ ಎಂದರು.
ಹೈನುಗಾರಿಕೆಯಿಂದ ಬದುಕು ಹಸನಗಿದೆ ಎಂದು ಪ್ರೇಮಾ,ಬಟ್ಟೆವ್ಯಾಪಾರದಿಂದ ಸ್ವಾವಲಂಬನೆ ಬಂದಿದೆ ಎಂದು ವಿದ್ಯಾ,ಹಿಟ್ಟಿನ ಗಿರಣಿ ನಡೆಸುವ ರೇಣುಕಾ ತಮ್ಮ ಅನುಭವ ಹಂಚಿಕೊಂಡರೆ,ಗಂಗಮ್ಮನವರ ಕಿರಾಣಿ ಅಂಗಡಿ ಮೂಲಕ ವ್ಯಾಪಾರದ ತಿಳುವಳಿಕೆ ಪ್ರತಿಯೊಬ್ಬ ಮಹಿಳಾ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಸಂಜೀವಿನಿ ಯೋಜನೆಯ ತಾಲೂಕ ಘಟಕದ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು ತಾಲೂಕ ವ್ಯವಸ್ಥಾಪಕರು, ಸಮೂಹ ಮೇಲ್ವಿಚಾರಕರು, BDSPs, ಮತ್ತು ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಜೀವಿನಿ ಯೋಜನೆಯ ಸ್ವ ಸಹಾಯ ಗುಂಪುಗಳ ಮಹಿಳಾ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಈ ಮಾಸಿಕ ಸಂತೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಮಹಿಳಾ ಸದಸ್ಯರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷರಾದ ಪುಷ್ಪ ಕಾಂಬ್ಳಿ, ಮುಖ್ಯ ಪುಸ್ತಕ ಬರೆದಂತ ರೇಖಾ ಸೂಡಿ ಕಾರ್ಯವನ್ನು ಮೆಚ್ಚಿಕೊಂಡರು.
ವರದಿ: ಸುರೇಶ ಬಂಡಾರಿ.