
ಕನ್ನಡ ಪ್ರಭಾ ಪತ್ರಿಕೆ ವರದಿಗಾರ ಎಸ್.ಎಂ.ಸೈಯದ್ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನ.
ಗದಗ:ಸತ್ಯಮಿಥ್ಯ (ಜ -26).
ಪತ್ರಿಕೋದ್ಯಮ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಗಜೇಂದ್ರಗಡದ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ, ಕನ್ನಡಪ್ರಭ ದಿನ ಪತ್ರಿಕೆಯ ವರದಿಗಾರ ಎಸ್.ಎಂ.ಸೈಯದ್ ಅವರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿಂದು ಸನ್ಮಾನಿಸಲಾಯಿತು.
ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ೭೬ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿದ ವರದಿಗಾರ ಎಸ್.ಎಂ.ಸೈಯದ್ ಅವರಿಗೆ ಗಜೇಂದ್ರಗಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಸೇರಿ ಸರ್ವ ಸದಸ್ಯರು ಅಭಿನಂದನೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನಿತ ಪತ್ರಕರ್ತ ಎಸ್. ಎಂ. ಸೈಯದ್. ನನ್ನ ಕಾರ್ಯಕ್ಷಮತೆಯನ್ನು ಗುರುತಿಸಿ ಜಿಲ್ಲಾಡಳಿತ ನನ್ನನ್ನು ಸನ್ಮಾನಿಸಿದ್ದು ಖುಷಿಯಾಗಿದೆ.ನನ್ನ ಈ ಸಾಧನೆಗೆ ಸಹಕಾರ ನೀಡಿದ ಪತ್ರಿಕಾ ಬಳಗದ ಹಿರಿಯರು, ಸ್ನೇಹಿತರು ಮತ್ತು ಓದುಗ ಬಳಗಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.