
ನಾರಾಯಣಪುರ ಕಾಲುವೆಗೆ ಕಾಲು ಜಾರಿ ಬಿದ್ದ ಮಾಜಿ ಯೋಧನ ಪುತ್ರ : 3 ದಿನಗಳ ಬಳಿಕ ಶವವಾಗಿ ಪತ್ತೆ.

ಲಿಂಗಸೂಗೂರು:ಸತ್ಯಮಿಥ್ಯ (ಆಗಸ್ಟ್ -09)
ತಾಲೂಕಿನ ಬೆಂಡೋಣಿ ಗ್ರಾಮದ ಮಾಜಿ ಸೈನಿಕರಾದ ಯಲ್ಲಪ್ಪ ಹಲ್ಕಾವಟಗಿಯವರ ಪುತ್ರ ತೇಜಸ್ವಿ (22) ಎಂಬ ಯುವಕನೋರ್ವ ಅಗಸ್ಟ್ 6 ರಂದು ನಾರಾಯಣಪುರ ಚೆಕ್ ಪೋಸ್ಟ್ ಬಳಿಯ ಎಡದಂಡೆ ಕಾಲುವೆಗೆ ಮುಖ ತೊಳೆಯಲು ಹೋಗಿ ಕಾಲು ಜಾರಿ ಬಿದ್ದ ಘಟನೆ ನಡೆದಿದ್ದು, ಮೂರು ದಿನಗಳ ಬಳಿಕ ಇಂದು ಕೊಡೆಕಲ್ ದ ಬೂದಿಹಾಳ ಸೇತುವೆ ಹತ್ತಿರ ಯುವಕ ಶವವಾಗಿ ಪತ್ತೆಯಾದ ಪ್ರಕರಣ ನಡೆದಿದೆ.
ಲಿಂಗಸಗೂರು ಪಟ್ಟಣದ ಸಂಗಮೇಶ್ವರ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಮೃತ ಯುವಕ ತೇಜಸ್ವಿ ತನ್ನ ಸ್ನೇಹಿತನ ಜೊತೆ ಆಲಮಟ್ಟಿ ಹೋಗಿ ಮರಳಿ ಬರುವ ಸಮಯದಲ್ಲಿ ಮುಖ ತೊಳೆಯಲು ಎಂದು ನಾರಾಯಣಪುರ ಕ್ರಾಸ್ ಬಳಿಯ ಎಡದಂಡೆ ಕಾಲುವೆ ಗೆ ಇಳಿದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದು,ನೀರಿನ ಸುಳಿಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.
ಪೋಲೀಸರ ಅಸಹಕಾರ :- ಕಾಲುವೆಗೆ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸ್ಥಳೀಯ ನಾರಾಯಣಪುರ ಪೋಲೀಸ್ ಠಾಣೆ ಗೆ ಮಾಹಿತಿ ನೀಡಲು ಹೋದಾಗ ಈ ಘಟನೆ ನಮ್ಮ ವ್ಯಾಪ್ತಿಗೆ ಬರಲ್ಲ,ನಾಲತವಾಡ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುತ್ತೆ ಎಂದು ಹೇಳಿದ್ದಾರೆ. ನಂತರ ನಾಲತವಾಡ ಪೋಲಿಸ್ ಠಾಣೆಗೆ ತೆರಳಿ ಮಾಹಿತಿ ನೀಡಿದರೆ ಅವರು ಎಡದಂಡೆ ಕಾಲುವೆ 100 ಮೀ ವ್ಯಾಪ್ತಿ ಬರುತ್ತೆ ,ನೀವೂ ಮುದ್ದೇಬಿಹಾಳ ಠಾಣೆ ಬರುತ್ತೆ ಎಂದು ಹೇಳುವ ಮೂಲಕ ಪೋಲಿಸರು ಅಸಹಕಾರ ತೋರಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶವ ಪತ್ತೆಯಾದ ತಕ್ಷಣ ಸ್ಥಳಕ್ಕೆ ಕೊಡೆಕಲ್ ಠಾಣೆಯ ಪೋಲಿಸರು ಭೇಟಿ ನೀಡಿದ್ದು, ಮರಣೋತ್ತರ ಪರಿಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದು ಅಂತ್ಯಕ್ರೀಯೆ ಇಂದು ಸಾಯಂಕಾಲ ಬೆಂಡೋಣಿ ಗ್ರಾಮದಲ್ಲಿ ನಡೆಯಲಿದೆ ಎಂದು ಮೃತನ ಕುಟುಂಬಸ್ಥರಿಂದ ಮಾಹಿತಿ ತಿಳಿದು ಬಂದಿದೆ.
ವರದಿ :ರಮೇಶ ನಾಯಕ.