ಜಿಲ್ಲಾ ಸುದ್ದಿ

ಬಲ್ಡೋಟಾ ಹೇಳಿಕೆ : ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ವಜಾಕ್ಕೆ ಆಗ್ರಹ.

Share News

ಬಲ್ಡೋಟಾ ಹೇಳಿಕೆ : ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ವಜಾಕ್ಕೆ ಆಗ್ರಹ.

ಕೊಪ್ಪಳ:ಸತ್ಯಮಿಥ್ಯ (ಆ-23).

ಸರ್ಕಾರದ ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಪ್ರತಿಭಟಿಸಿ ಆಗ್ರಹಿಸಿತು.

ನಗರದ ಅಶೋಕ ವೃತ್ತದಲ್ಲಿ ಹೋರಾಟಗಾರರು ಜಮಾಯಿಸಿ ಸರ್ಕಾರದ ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ ಅವರು ಕೊಪ್ಪಳ ಬಸಾಪುರ ಕೆರೆಯನ್ನು ಎಂ.ಎಸ್.ಪಿ.ಎಲ್. ಕಾರ್ಖಾನೆ ಮಾಡಿದ ಅತಿಕ್ರಮಣದಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ, ಸರ್ಕಾರ ಇದರಲ್ಲಿ ಯಾವ ಕ್ರಮ ಕೈಗೊಂಡಿದೆ? ಬಿ.ಎಸ್.ಪಿ.ಎಲ್. ಕಾರ್ಖಾನೆ ವಿಸ್ತರಣೆಯ ಕುರಿತಾದ ಮಾನ್ಯ ಮುಖ್ಯಮಂತ್ರಿಗಳ ತಡೆಯಾಜ್ಞೆ ಜಾರಿಗೆ ಬಂದಿಲ್ಲ ಯಾಕೆಂದು? ಪ್ರಶ್ನೆ ಕೇಳಿದ್ದಕ್ಕೆ ಬೇಜವಾಬ್ದಾರಿಯಿಂದ ಹೇಳಿಕೆ ಕೊಟ್ಟಿದ್ದನ್ನು ಆತಂಕದಿಂದ ಕೊಪ್ಪಳದ ಜನತೆ ಖಂಡಿಸುತ್ತೇವೆ.

ಕೊಪ್ಪಳ ಮತ್ತು ಭಾಗ್ಯನಗರದ ಒಂದೂವರೆ ಲಕ್ಷ ಜನರ ಭವಿಷ್ಯಕ್ಕೆ ಬಿ.ಎಸ್.ಪಿ.ಎಲ್. ವಿಸ್ತರಣೆ ಜೀವಕಂಟಕವಾಗಿದ್ದು ಫೆಬ್ರುವರಿ ೨೪ರಂದು ನಗರದಲ್ಲಿ ಸಾವಿರಾರು ಜನರು ಸದರಿ ವಿಸ್ತರಣೆ ಮತ್ತು ಈಗಾಗಲೇ ಎಂ.ಎಸ್.ಪಿ.ಎಲ್. ಪಲ್ಲೆಟ್ ಘಟಕದ ಏಕೈಕ ಚಿಮಣಿಯ ಪರಿಸರ ಹಾನಿಯನ್ನು ವಿರೋಧಿಸಿ ಕೊಪ್ಪಳ ಬಂದ್ ಆಚರಿಸಿ, ತಮ್ಮಲ್ಲಿಗೆ ನಿಯೋಗ ಬಂದು ವಿಸ್ತರಣೆ ಶಾಶ್ವತವಾಗಿ ತಡೆಯಬೇಕೆಂದು ಕೋರಿಕೊಂಡಾಗ ತಕ್ಷಣ ತಾವು ಕೊಪ್ಪಳ ಜನರ ಆರೋಗ್ಯದ ಹಿತದೃಷ್ಟಿಯಿಂದ ವಿಸ್ತರಣೆ ಪೂರಕವಾದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆದೇಶ ಮಾಡಿದ್ದನ್ನು ಇಲ್ಲಿನ ಜನರು ಹರ್ಷಗೊಂಡು ಸ್ವಾಗತಿಸಿದರು. ಆ ದಿನದಿಂದ ವಿಸ್ತರಣೆಗೆ ಶಾಶ್ವತತಡೆ ಆದೇಶಕ್ಕಾಗಿ ಜನರು ಕಾಯ್ದು, ನಿರಂತರ ಹೋರಾಡುತ್ತಿರುವಾಗಲೇ, ಬಿ.ಎಸ್.ಪಿ.ಎಲ್. ವಿಸ್ತರಣೆ ನಿಲ್ಲುವುದಿಲ್ಲವೆಂದು, ಕಾರ್ಖಾನೆ ವಿಸ್ತರಣೆ ಆರಂಭಿಕ ಚಟುವಟಿಕೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರದ ಕಡೆಗೆ ಕೈತೋರಿಸಿ ಅಸಡ್ಡೆತನದ ಉತ್ತರವನ್ನು ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವರು ಕೊಡುವ ಮೂಲಕ ಮಾನ್ಯ ಮುಖ್ಯಮಂತ್ರಿಗಳ ತಡೆ ಆದೇಶಕ್ಕೆ ಮತ್ತು ಸರಕಾರಕ್ಕೆ ಅವಮಾನ ಮಾಡಿದ್ದಾರೆ. ಇವರ ಈ ಬೇಜವಾಬ್ದಾರಿ ಹೇಳಿಕೆ ಖಂಡಿಸುವ ಕೊಪ್ಪಳದ ಜನತೆ, ಇವರು ತೋರುವ ಕಾರ್ಖಾನೆ ಪರವಾದ ದಾವಂತದ ಹಿತಾಸಕ್ತಿ ನಮಗೆ ಮುಳುವಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

ಬಸಾಪುರ ಕೆರೆ ಸಾರ್ವಜನಿಕರ, ಜನ ಜಾನುವಾರುಗಳ ಉಪಯೋಗಕ್ಕೆ ಮುಕ್ತವಾಗಿಡಬೇಕೆಂದು ಉಚ್ಚ ನ್ಯಾಯಾಲಯ ಆದೇಶ ಮಾಡಿದ್ದರೂ ಕಂಪನಿ ಆ ಕೆರೆಗೆ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಕುಡಿಯುವ ನೀರಿನ ಹಕ್ಕು ಕಸಿದು ಕೊಂಡಾಗಲೂ, ಜಿಲ್ಲಾಡಳಿತಕ್ಕೆ ಹಲವಾರು ಮನವಿಪ್ರತ ಕೊಟ್ಟು ಆದೇಶ ಜಾರಿಗೆ ಕೋರಿದ್ದರೂ ಇದುವರೆಗೆ ಜಾನುವಾರು ನೀರು ಕುಡಿಸಲು ಕೆರೆ ಮುಕ್ತಗೊಳಿಸಿಲ್ಲ. ಬದಲಾಗಿ ನೀರು ಕುಡಿಸಲು ಹೋದ ದನಗಾಹಿ ಮತ್ತು ಕುರಿಗಾಹಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಕಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಇವರು ಸದನದಲ್ಲಿ ಕೆರೆ ನೀರು ಕುಡಿಯಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿದವರು ಇದುವರೆಗೆ ನೀರಿನ ಸೌಕರ್ಯ ಮಾಡಿಲ್ಲ. ಆದ್ದರಿಂದ ಇವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಬಸಾಪುರ ಕೆರೆ ಜಾನುವಾರು ನೀರು ಕುಡಿಸಲು ಮುಕ್ತಗೋಳಿಸಬೇಕು. ಸರ್ಕಾರ ಕಾರ್ಖಾನೆಗೆ ಕೆರೆ ಮಂಜೂರಿ ಮಾಡಿದ ಆದೇಶ ವಾಪಸ್ ಪಡೆಯಬೇಕು. ಅತಿ ಶೀಘ್ರವಾಗಿ ಬಿ.ಎಸ್.ಪಿ.ಎಲ್. ವಿಸ್ತರಣೆಗೆ ಶಾಶ್ವತ ತಡೆ ಆದೇಶ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ಡಿ. ಎಂ. ಬಡಿಗೇರ, ಮುದುಕಪ್ಪ ಹೊಸಮನಿ, ಎಸ್. ಎ. ಗಫಾರ್, ಶಿವಪ್ಪ ಹಡಪದ, ರವಿ ಕಾಂತನವರ, ಮಂಗಳೇಶ ರಾಠೋಡ, ಹನುಮಂತಪ್ಪ ಗೊಂದಿ, ಶಾಂತಪ್ಪ ಅಂಗಡಿ, ಎಂ.ಡಿ. ಪಾಟೀಲ, ಶಂಭುಲಿಂಗಪ್ಪ ಹರಗೇರಿ, ಹನುಮಪ್ಪ ಕಟಗಿ, ಬಂದೇನವಾಜ ಮನಿಯಾರ, ಸುಂಕಪ್ಪ ಮೀಸಿ, ಯಮನೂರಪ್ಪ, ಸುಂಕಮ್ಮ ಇತರರು ಇದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!