
ರಾಮಾಪೂರ ಗ್ರಾಮ ಪಂಚಾಯತಿಗೆ ಲೋಕಾ ಅಧಿಕಾರಿಗಳು ಧೀಡಿರ್ ಭೇಟಿ : ಮಹತ್ವದ ದಾಖಲೆ ಪರಿಶೀಲನೆ.

ಗಜೇಂದ್ರಗಡ: ಸತ್ಯಮಿಥ್ಯ (ಜೂ -29).
ಗಜೇಂದ್ರಗಡ ತಾಲೂಕಿನ ರಾಮಾಪೂರ ಗ್ರಾಮ ಪಂಚಾಯತಿಗೆ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ 8 ಜನ ಅಧಿಕಾರಿಗಳ ತಂಡ ಸೋಮವಾರ ಧಿಡೀರ್ ಭೇಟಿ ನೀಡಿದರು.

ಅನೇಕ ಸಾರ್ವಜನಿಕರ ದೂರು, ಪತ್ರಿಕಾ ವರದಿ ಹಿನ್ನೆಲೆಯಲ್ಲಿ ಬೆಂಗಳೂರು ಲೋಕಾಯುಕ್ತ ಕಚೇರಿಯಿಂದ ಜೂನ್ 15 ರಂದು ಶೋಧನಾ ವಾರೆಂಟ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಲೋಕಾ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಬೆಳಗ್ಗೆಯಿಂದ ಸಾಯಂಕಾಲದವರೆಗೂ ಗ್ರಾಮ ಪಂಚಾಯತಿಯ ಅನೇಕ ಮಹತ್ವದ ಕಡತಗಳನ್ನು ಪರಿಶೀಲನೆ ಮಾಡಿದರು.

ಬಳಿಕ ಲೋಕಾಯುಕ್ತ ಡಿ.ವೈ.ಎಸ್.ಪಿ. ವಿಜಯ ಬಿರಾದಾರ ಮಾಹಿತಿ ನೀಡಿ ರಾಮಾಪೂರು ಗ್ರಾಮ ಪಂಚಾಯತಿಗೆ ಸೋಮವಾರ ಭೇಟಿ ನೀಡಿ ಅನೇಕ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಪಿಡಿಓ ಇಟಗಿಮಠ ಗೈರಾಗಿದ್ದು ಮೊದಲು ಗದಗ ಮೀಟಿಂಗ್ ತೆರಳಿದ್ದಾರೆ ಎಂಬ ಮಾಹಿತಿ ಇತ್ತು ನಂತರ ಆರೋಗ್ಯ ನೆಪ ಹೇಳಿ ಗ್ರಾಮ ಪಂಚಾಯತಿಗೆ ಬರಲಿಲ್ಲ. ಗ್ರಾಮ ಪಂಚಾಯತಿಯ ದಾಖಲೆ ಪರಿಶೀಲನೆ ವೇಳೆಯಲ್ಲಿ ಅನೇಕ ಲೋಪದೋಷಗಳು ಕಂಡು ಬಂದಿವೆ. ಮುಖ್ಯವಾಗಿ ಗ್ರಾಮ ಪಂಚಾಯತ್ ಠರಾವು ಪುಸ್ತಕ, ಕ್ಯಾಶಬುಕ್, ಆಸ್ತಿ ರಿಜಿಸ್ಟರ್ ಸೇರಿದಂತೆ ಹಲವಾರು ಮಹತ್ವದ ದಾಖಲೆಗಳನ್ನು ಪಿಡಿಓ ಬಸಯ್ಯ ಇಟಗಿಮಠ ತೆಗೆದುಕೊಂಡು ಹೋಗಿದ್ದಾರೆ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿ ತನಿಖೆಯ ವೇಳೆ ತಿಳಿಸಿದ್ದಾರೆ. ಅಲ್ಲದೇ ಆಸ್ತಿ ಮೊಟೇಷನ್ ಗಳಿಗೆ ಸರ್ಕಾರ ನಿಗದಿ ಪಡಿಸಿರುವ 1% ಹಣಕ್ಕಿಂತ 3% ರಷ್ಟು ಹಣವನ್ನು ಸಾರ್ವಜನಿಕರಿಂದ ಪಡೆದಿರುವದು ಬೆಳಕಿಗೆ ಬಂದಿದೆ.ಅನೇಕ ಕಾಮಗಾರಿಗಳ ಕೋಟೆಷನ್ ಮತ್ತು ಬಿಲ್ ಗಳಲ್ಲಿ ವ್ಯತ್ಯಾಸ ಕಂಡು ಬಂದಿವೆ . 7 ಹಳ್ಳಿಗಳನ್ನು ಹೊಂದಿರುವ ಗ್ರಾಮ ಪಂಚಾಯತಿ ಯಾವುದೇ ಕಸ ವಿಲೇವಾರಿ ಘಟಕಗಳನ್ನು ಹೊಂದಿರುವುದಿಲ್ಲ ಹಾಗೂ ಕಸ ವಿಲೇವಾರಿ ವಾಹನವು ಸು.1 ತಿಂಗಳಿಂದ ಕೆಟ್ಟು ನಿಂತಿದ್ದು ವಿಪರ್ಯಾಸವಾಗಿದೆ. 2023-24ರಲ್ಲಿನ ಕಾಮಗಾರಿಗಳಿಗೆ 2025-26ರಲ್ಲಿ ಹಣವನ್ನು ಕೊಟ್ಟಿರುವದು ಅಕ್ರಮ ನಡೆದಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು . ಅನೇಕ ಕೋಟೆಷನ್ಗಳಲ್ಲಿ ಯಾವುದೇ ಅಧಿಕಾರಿಗಳ ಸಹಿ ಸಹ ಇರುವುದಿಲ್ಲ. ಹೆಸರಿಗೆ ದೊಡ್ಡ ಗ್ರಾಮ ಪಂಚಾಯತಿ ಎನ್ನಿಸುವ ರಾಮಾಪೂರ ಗ್ರಾಮ ಪಂಚಾಯತಿಯಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಅದರಲ್ಲೂ ಮುಖ್ಯವಾಗಿ ಪುರುಷ ಮತ್ತು ಮಹಿಳಾ ಶೌಚಾಲಯ ಇಲ್ಲದಿರುವುದು, ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯವು ಕೂಡಾ ಇಲ್ಲದಿರುವುದು, ಇದ್ದ ಒಂದು ಶೌಚಲಯವು ಗಬ್ಬೆದ್ದು ನಾರುತ್ತಿರುವುದು ಹಾಗೂ ಕೀಲಿ ಹಾಕಿದ್ದು ಇರುತ್ತದೆ ಅಲ್ಲದೇ ಸಿ ಸಿ ಕ್ಯಾಮೆರಾ ಸೌಲಭ್ಯ ಇಲ್ಲದಿರುವುದರಿಂದ ಸಂಪೂರ್ಣ ಗ್ರಾಮ ಪಂಚಾಯತಿ ಅವ್ಯವಸ್ಥೆಯ ಆಗರವಾಗಿದೆ ಎಂದರು.
ಲೋಕಾಯುಕ್ತ ಪಿ.ಎಸ್.ಐಗಳಾದ ಪರಮೇಶ್ವರ ಕವಟಗಿ,ಎಸ್,ಎಸ್,ತೇಲಿ, ಸಿಬ್ಬಂದಗಳಾದ ಎ.ಪಿ.ಅಂಬಿಗೇರ, ಮಂಜು ಗಾರಗಿ, ಹಸನ ದೇಂಪೂರವಾಲ, ಎಮ್.ಆರ್..ಹಿರೇಮಠ, ಎಸ್,ವಿ,ನೈನಾಪೂರ, ಗಜೇಂದ್ರಗಡ ಪುರಸಭೆ ಅಧಿಕಾರಿಗಳಾದ ಸಿ.ಡಿ.ದೊಡ್ಡಮನಿ, ಅಜ್ಜಪ್ಪ ನೀಲಿ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ




