
ಗದಗ – ಪ್ಲಾಸ್ಟಿಕ್ ಚೀಲ ತ್ಯಜಿಸಿ, ಕಾಗದದ ಚೀಲ ಬಳಸಿ, ಪರಿಸರ ಉಳಿಸಿ’ ಎಂದು ಜಾಗೃತಿ ಅಭಿಯಾನ.
ಗದಗ:ಸತ್ಯಮಿಥ್ಯ ( ಜುಲೈ-19).
ಪ್ರತಿ ವರ್ಷ ಜುಲೈ 12ರಂದು ಪೇಪರ್ ಬ್ಯಾಗ್ ದಿನ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಸಂಸ್ಥೆಯವರು ಗದಗ ಮಾರುಕಟ್ಟೆಯಲ್ಲಿ ಪೇಪರ್ ಬ್ಯಾಗ್ ಹಂಚಿ ಜನರಿಗೆ ‘ಪ್ಲಾಸ್ಟಿಕ್ ಚೀಲ ತ್ಯಜಿಸಿ, ಕಾಗದದ ಚೀಲ ಬಳಸಿ, ಪರಿಸರ ಉಳಿಸಿ’ ಎಂದು ಜಾಗೃತಿ ಮೂಡಿಸಿದರು.ಸಂಸ್ಥೆಯ ಅಧ್ಯಕ್ಷೆ ನಾಗರತ್ನ ಮಾರನಬಸರಿ ಮಾತನಾಡಿ, ‘ಪ್ಲಾಸ್ಟಿಕ್ ತ್ಯಜಿಸುವಂತೆ ಯುವಜನರಲ್ಲಿ ಜಾಗೃತಿ ಮೂಡಿಸಲು ಪೇಪರ್ ಬ್ಯಾಗ್ ಡೇ ಆಚರಿಸಲಾಗುತ್ತಿದೆ’ ಎಂದರು.
ಅತಿಯಾದ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯಿಂದ ಪರಿಸರಕ್ಕೆ ತೀವ್ರವಾದ ಹಾನಿಯಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದಿಂದ ಪ್ರಾಣಿಗಳ ಜೀವನ, ಮಾನವ ಆರೋಗ್ಯ ಮತ್ತು ನಮ್ಮ ಪರಿಸರ ವ್ಯವಸ್ಥೆ ಮೇಲೆ ಗಂಭೀರವಾದ ದುಷ್ಪರಿಣಾಮ ಬೀರಿದೆ. ಪ್ಲಾಸ್ಟಿಕ್ ಚೀಲಗಳು ಮತ್ತು ಇತರ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಈ ತೊಂದರಗೆ ಪ್ರಮುಖ ಕಾರಣವಾಗಿದೆ’ ಎಂದು ತಿಳಿಸಿದರು.
ಡಾ. ಹನುಮಂತಗೌಡ ಕಲ್ಮನಿ ಮಾತನಾಡಿ, ‘ಪೇಪರ್ ಬ್ಯಾಗ್ಗಳನ್ನು ಉಪಯೋಗಿಸಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ತ್ಯಜಿಸುವುದು ಪರಿಸರ ಸ್ನೇಹಿ ಕಾರ್ಯವಾಗಿದೆ’ ಎಂದು ಹೇಳಿದರು.
ಕ್ಲಬ್ನ ಕಾರ್ಯದರ್ಶಿ ವೀಣಾ ತಿರ್ಲಾಪುರ, ಪುಷ್ಪಾ ಭಂಡಾರಿ, ಖಜಾಂಚಿ ಪೂಜಾ ಭೂಮಾ, ಸುಮಾ ಪಾಟೀಲ, ಶೀವಲೀಲಾ ಅಕ್ಕಿ, ಪುಷ್ಪಾ ಕೊರವಣ್ಣನವರ್, ಕಮಲಾ ಜಂಬಗಿ ಮತ್ತು ರೇಣುಕಾ ಅಮಾತ್ಯ ಇದ್ದರು.
ವರದಿ : ಮುತ್ತು.