
ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವ ವಿದ್ಯಾರ್ಥಿ-ಯುವಜನರ ವಿರೋಧಿ ರಾಜ್ಯ ಬಜೆಟ್ – ಎಸ್ಎಫ್ಐ.
ಗಜೇಂದ್ರಗಡ : ಸತ್ಯಮಿಥ್ಯ (ಮಾ -07)
2025-26 ನೇ ಸಾಲಿನ ರಾಜ್ಯ ಬಜೆಟ್ ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಂಡನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಹಲವಾರು ನಿರೀಕ್ಷೆಯಲ್ಲಿದ್ದರು ಆದರೆ ಈ ಬಜೆಟ್ ವಿದ್ಯಾರ್ಥಿ ಯುವಜನರ ನಿರೀಕ್ಷೆಯನ್ನು ಹುಸಿಮಾಡಿದೆ ಎಂದು ಎಸ್ ಎಫ್ ಐ ಗದಗ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ಕೊಠಾರಿ ಆಯೋಗದ ವರದಿ ಶಿಫಾರಸ್ಸಿನ ಪ್ರಕಾರ ಬಜೆಟ್ ನಲ್ಲಿ 30% ಶಿಕ್ಷಣಕಾಗಿ ಮೀಸಲಿಬೇಕು ಆದರೆ ಇಂದಿನ ಬಜೆಟ್ ಶೇ 10 ರಷ್ಟು (45,286 ಸಾವಿರ ಕೋಟಿ ) ಮೀಸಲು ಇಡುವ ಮೂಲಕ ಶಿಕ್ಷಣ ವಿರೋಧಿ ಬಜೆಟ್ ಆಗಿದೆ.
ರಾಜ್ಯದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಈಗ ಇರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಈ ಬಜೆಟ್ ವಿಫಲವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಂದ ದೂರ ಮಾಡಿ ಸರ್ಕಾರ ಈಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಿ ಪಂಚಾಯತಿಗೆ ಒಂದು ಶಾಲೆ ಎಂಬುವ ಸರ್ಕಾರದ ನಿಲುವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ.
8 ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸೈಕಲ್ ಯೋಜನೆಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಮಾಸಿಕ ಹಣವನ್ನು 1850 ರಿಂದ 3500 ಸಾವಿರ ಹೆಚ್ಚಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಅರೋಗ್ಯ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಪಲವಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಖಾಲಿ ಇರುವ 2,000 ಭೋದಕ ಹುದ್ದೆಗಳನ್ನು ಭರ್ತಿ ಮಾಡುವ ಕ್ರಮವನ್ನು ಸ್ವಾಗತಿಸುತ್ತಾ ರಾಜ್ಯದಲ್ಲಿ ಬಹುತೇಕ ಕಾಲೇಜುಗಳಲ್ಲಿ ಶೇ 90 ರಷ್ಟು ಉಪನ್ಯಾಸಕರು ಅತಿಥಿ ಉಪನ್ಯಾಸಕರಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೋಳ್ಳಬೇಕಿತ್ತು. ಮತ್ತು ರಾಜ್ಯದಲ್ಲಿ ಇರುವ ಕಾಲೇಜುಗಳಿಗೆ 275 ಕೋಟಿ ಮೀಸಲಿಟ್ಟಿರುವುದು ಎಷ್ಟು ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಮತ್ತು ನರ್ಸಿಂಗ್ ಕಾಲೇಜು ತೆರೆಯಬೇಕು ಎಂಬುದು ನಮ್ಮ ಒತ್ತಾಯ ಆದರೆ ಇದನ್ನು ಇಂದಿನ ಬಜೆಟ್ ಹುಸಿಯಾಗಿಸಿದೆ ಒಟ್ಟಾರೆ ರಾಜ್ಯ ಬಜೆಟ್ ವಿದ್ಯಾರ್ಥಿ ಯುವ ಜನರ ವಿರೋಧಿ ಬಜೆಟ್ ಎಂದು ಸ್ಪಷ್ಟವಾಗಿದೆ.
ವರದಿ : ಸುರೇಶ ಬಂಡಾರಿ.