ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಸಂಭ್ರಮದ ‘ಅಕ್ಷರಾಭ್ಯಾಸ’ ಕಾರ್ಯಕ್ರಮ.
ಅಕ್ಷರಾಭ್ಯಾಸ ಎನ್ನುವುದು ಮಗುವಿನ ಜ್ಞಾನದ ಕಣ್ಣು ತೆರೆಸುವ ಸಂಸ್ಕಾರ: ಸೀತಲ ಓಲೇಕಾರ.

ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಸಂಭ್ರಮದ ‘ಅಕ್ಷರಾಭ್ಯಾಸ’ ಕಾರ್ಯಕ್ರಮ.

ಅಕ್ಷರಾಭ್ಯಾಸ ಎನ್ನುವುದು ಮಗುವಿನ ಜ್ಞಾನದ ಕಣ್ಣು ತೆರೆಸುವ ಸಂಸ್ಕಾರ: ಸೀತಲ ಓಲೇಕಾರ.
ಗಜೇಂದ್ರಗಡ: ಸತ್ಯಮಿಥ್ಯ (ಜೂ -13)
ನಗರದ ಸಮೀಪದ ಸೈನಿಕ ಕಾಲೋನಿ ಹತ್ತಿರವಿರುವ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ದಾಖಲಾದ ಪುಟ್ಟ ಮಕ್ಕಳಿಗಾಗಿ ‘ಅಕ್ಷರಾಭ್ಯಾಸ’ (ವಿದ್ಯಾರಂಭ) ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಅತ್ಯಂತ ಸಂಭ್ರಮ ಹಾಗೂ ಸಾಂಪ್ರದಾಯಿಕ ಶ್ರದ್ಧಾಭಕ್ತಿಯೊಂದಿಗೆ ಜರುಗಿದ ಈ ಕಾರ್ಯಕ್ರಮ ಪಾಲಕರ ಮೆಚ್ಚುಗೆಗೆ ಪಾತ್ರವಾಹಿತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಜ್ಞಾನದೇವತೆ ಶ್ರೀ ಸರಸ್ವತಿ ದೇವಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಮಂತ್ರಘೋಷಗಳೊಂದಿಗೆ ಅರ್ಚನೆ ಮಾಡಲಾಯಿತು. ಸ್ಥಳೀಯ ವರಸಿದ್ದಿ ವಿನಾಯಕ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ತೈಲಂಗ ಅವರು ಕಾರ್ಯಕ್ರಮದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ನಂತರ ಪೋಷಕರ ಸಮ್ಮುಖದಲ್ಲಿ ಪುಟ್ಟ ಮಕ್ಕಳ ಕೈಹಿಡಿದು, ತಟ್ಟೆಯಲ್ಲಿ ಹರಡಿದ್ದ ಅಕ್ಕಿಯ ಮೇಲೆ ಪ್ರಣವ ಮಂತ್ರ ಹಾಗೂ ಅಕ್ಷರಗಳನ್ನು ಬರೆಸುವ ಮೂಲಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ, ಶೈಕ್ಷಣಿಕ ಪಯಣಕ್ಕೆ ಮಂಗಲಾರ್ಪಣೆ ಮಾಡಿದರು.
ಬಳಿಕ ಸಂಸ್ಥೆಯ ಅಧ್ಯಕ್ಷರಾದ ಸೀತಲ ಓಲೇಕಾರ ಮಾತನಾಡಿ ಅಕ್ಷರಾಭ್ಯಾಸ ಎನ್ನುವುದು ಮಗುವಿನ ಜ್ಞಾನದ ಕಣ್ಣನ್ನು ತೆರೆಸುವ ಅತ್ಯಂತ ಪವಿತ್ರವಾದ ಸಂಸ್ಕಾರವಾಗಿದೆ. ಮಗುವಿನ ಮೊದಲ ಹೆಜ್ಜೆಯೇ ಸಂಸ್ಕಾರಯುತವಾಗಿದ್ದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ನಮ್ಮ ಸಂಸ್ಥೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿಯನ್ನು ನೀಡಲು ಸದಾ ಬದ್ಧವಾಗಿದೆ ಎಂದು ಹಾರೈಸಿದರು.
ನಂತರ ಸಂಸ್ಥೆಯ ಕಾರ್ಯದರ್ಶಿಯಾದ ನಾಜೀಯಾ ಮುದಗಲ್ ಅವರು ಮಾತನಾಡಿ, ಪೂರ್ವ ಪ್ರಾಥಮಿಕ ಹಂತವು ಮಕ್ಕಳ ಶೈಕ್ಷಣಿಕ ಜೀವನದ ಭದ್ರ ಬುನಾದಿಯಾಗಿದೆ. ಪೋಷಕರು ಮತ್ತು ಶಿಕ್ಷಕರು ಜಂಟಿಯಾಗಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಬೇಕು. ನಮ್ಮ ಶಾಲೆಯನ್ನು ನಂಬಿ ಮಕ್ಕಳನ್ನು ಸೇರಿಸಿದ ಎಲ್ಲಾ ಪೋಷಕರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಪ್ರೀತಿಯಿಂದ ಶಾಲಾ ವಾತಾವರಣಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಕಿರಣ ನಿಡಗುಂದಿ, ಸಂಗಮೇಶ ರೇವಡಿ, ತವಸೀನಬಾನು ಕರ್ನಾಚಿ, ಬಂಡಿಹಾಳ, ನಸ್ರೀನ ಮುಧೋಳ, ಕೀರ್ತನಾ ಬಂಡಿಹಾಳ, ರವಿ ನಿಡಗುಂದಿ, ರಮೇಶ ಲಕ್ಕಲಕಟ್ಟಿ, ಶಾಂತಮ್ಮ ಮುದುಟಗಿಮಠ, ಶಾಂತಾ, ಸೇರಿದಂತೆ ಅನೇಕರು ಇದ್ದರು.




