ಪುರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿಭಟನೆ-ಉತಾರ ನೀಡಲು ದುಡ್ಡು ತೆಗೆದುಕೊಂಡಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡ ಅಧಿಕಾರಿ.

ಪುರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿಭಟನೆ-ಉತಾರ ನೀಡಲು ದುಡ್ಡು ತೆಗೆದುಕೊಂಡಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡ ಅಧಿಕಾರಿ.
ಗಜೇಂದ್ರಗಡ : ಸತ್ಯಮಿಥ್ಯ (ಮಾ-26).
ಗಜೇಂದ್ರಗಡ ಪುರಸಭೆ ಫಲಾನುಭವಿಗಳಿಗೆ ಕಂಪ್ಯೂಟರ್ ಉತಾರ ನೀಡುವಲ್ಲಿ ವಿಳಂಬ ಮತ್ತು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಅದನ್ನು ವಿರೋಧಿಸಿ ಇಂದು ನಗರದ ಪುರಸಭೆ ಆವರಣದಲ್ಲಿ ಬೆಳಿಗ್ಗೆ ರೋಣ ಮಂಡಲ ಬಿಜೆಪಿ ಮತ್ತು ಭಾಜಪ ಪುರಸಭೆ ಸದಸ್ಯರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಮುಖಂಡ ಅಶೋಕ ವನ್ನಾಲ ಮಾತನಾಡಿ. ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ವಿನಾಕಾರಣ ಕಂಪ್ಯೂಟರ್ ಉತಾರ ನೀಡುವಲ್ಲಿ ರಾಜಕಾರಣ ಬೆರೆಸಿ ವಿಳಂಬ ಮಾಡುತ್ತಿದ್ದಾರೆ. ಈಗಾಗಲೇ 08 -03-2025 ರಂದು ಶಾಸಕರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಉತಾರ ನೀಡುವ ಕಾರ್ಯಕ್ರಮ ಮಾಡಿದ್ದಾರೆ. ಆ ದಿನ ಕೆಲವರಿಗೆ ಉತಾರ ನೀಡಿರುತ್ತಾರೆ ಆದರೆ ನಂತರದ ದಿನಗಳಲ್ಲಿ ಇನ್ನುಳಿದ ಫಲಾನುಭವಿಗಳಗೆ ಉತಾರ ನೀಡಲು ಅಧ್ಯಕ್ಷರು ಇನ್ನೊಮ್ಮೆ ಕಾರ್ಯಕ್ರಮ ಮಾಡಿ ಕೊಡುತ್ತೇವೆ. ನೀವೇಕೆ ಕಾರ್ಯಕ್ರಮಕ್ಕೆ ಬಂದಿಲ್ಲಾ. ನೋಡೋಣ – ಮಾಡೋಣ ಎನ್ನುತ್ತಾ. ಹಣ ಕೊಟ್ಟವರಿಗೆ ರಾತ್ರೋ ರಾತ್ರಿ ಉತಾರ ನೀಡುತ್ತಿದ್ದಾರೆ. ಆದ್ದರಿಂದ ಕೂಡಲೇ ಉತಾರ ವಿತರಣೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮತ್ತೋರ್ವ ಬಿಜೆಪಿ ಮುಖಂಡ ರಾಜೇಂದ್ರ ಘೋರ್ಪಡೆ ಮಾತನಾಡಿ.ಮಾಜಿ ಶಾಸಕರಾದ ಕಳಕಪ್ಪ ಬಂಡಿಯವರು ತಮ್ಮ ಅಧಿಕಾರವಾಧಿಯಲ್ಲಿ ಬಡವರನ್ನು ಗುರುತಿಸಿ ನಿವೇಶನ ನೀಡಿರುತ್ತಾರೆ. ಈ ವಿಚಾರದಲ್ಲಿ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ರಾಜಕೀಯ ಬೆರೆಸದೆ ಜನಪರ ಕಾಳಜಿಯಿಂದ ಉತಾರ ವಿತರಣೆ ಮಾಡಬೇಕು. ಪ್ರತಿಭಟನೆಯಲ್ಲಿ ಪಾಲ್ಗೊಂಡವರು ದಿನಗೂಲಿ ಮಾಡಿ ಜೀವನ ಸಾಗಿಸಬೇಕು ಇದನ್ನೂ ಗಮನದಲ್ಲಿ ಇಟ್ಟು ಶೀಘ್ರದಲ್ಲಿ ಉತಾರ ವಿತರಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಮೇಶ ಮಲ್ಲಾಪುರ, ಬುಡ್ಡಪ್ಪ ಮೂಲಿಮನಿ ಮಾತನಾಡಿದರು.
ಬಹಿರಂಗವಾಗಿ ಲಂಚ ಸ್ವೀಕಾರ ಮಾಡಿದ್ದನ್ನು ಒಪ್ಪಿಕೊಂಡ ಸರ್ಕಾರಿ ಅಧಿಕಾರಿ : ಪ್ರತಿಭಟನೆ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಪ್ರತಿಭಟನಾ ನಿರತರ ಜೊತೆ ಬಹಿರಂಗ ಮಾತುಕತೆ ನಡೆದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಶೋಕ ವನ್ನಾಲ ನಿಮ್ಮ ಅಧಿಕಾರಿಯೇ ಫಲಾನುಭವಿಗಳಿಗೆ ಉತಾರ ನೀಡಲು ಸಾವಿರ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಂತೆ. ಯೋಜನಾಧಿಕಾರಿ ಮಲ್ಲಿಕಾರ್ಜುನ ಸಾವಿರ ರೂಪಾಯಿ ತೆಗೆದುಕೊಂಡಿದ್ದೆ ಮರಳಿ ಕೊಟ್ಟುಬಿಟ್ಟೆ ಎಂದು ಹೇಳುವ ಮೂಲಕ ಮುಖ್ಯಾಧಿಕಾರಿ ಸಹಿತ ಪುರಸಭೆ ಸಿಬ್ಬಂದಿಗೆ ಮುಜುಗರ ಉಂಟುಮಾಡಿದ ಪ್ರಸಂಗ ಜರುಗಿತು.
ಫಲನುಭವಿಗಳಿಂದ ದುಡ್ಡು ಪಡೆಯಲು ಪುರಸಭೆ ಅಧ್ಯಕ್ಷರೇ ಹೇಳಿದರೆ? ಈ ಸಂದರ್ಭದಲ್ಲಿ ಪ್ರತಿಯೊಬ್ಬ ಫಲಾನುಭವಿಗಳಿಂದ ಒಂದು ಸಾವಿರ ರೂಪಾಯಿ ತೆಗೆದುಕೊಳ್ಳಲು ಪುರಸಭೆ ಅಧ್ಯಕ್ಷ ಸುಭಾಷ್ ಮ್ಯಾಗೇರಿಯವರೆ ಎಲ್ಲ ಮೆಂಬರಗಳಿಗೆ ಹೇಳಿದ್ದಾರೆ ಎಂದು ಪುರಸಭೆ ಬಿಜೆಪಿ ಸದಸ್ಯರು ಆರೋಪಿಸಿದರು.
ಬಿಜೆಪಿ ಹೋರಾಟಕ್ಕೆ ಹೆದರಿ ಹಣ ಜಮಾವಣೆ ಮಾಡಿದರೆ?
ಈ ಪ್ರಕರಣದಲ್ಲಿ ಈಗಾಗಲೇ ಒಟ್ಟು 180 ಉತಾರಗಳನ್ನು ನೀಡಲಾಗಿದೆ ಅದಕ್ಕೆ ಸಂಬಂದಿಸಿದ ಹಣವನ್ನು ಉತಾರ ನೀಡಿದ 15 ದಿನಗಳ ನಂತರ ಎಲ್ಲ ಪಲಾನುಭವಿಗಳಿಂದ ಸಂಗ್ರಹಿಸಿದ ಹಣದಲ್ಲಿ ಅರ್ಧ ಹಣವನ್ನು ಒಟ್ಟು ಸೇರಿಸಿ ಒಂದೇ ರಸೀದಿಯ ಮೂಲಕ ಜಮಾಮಾಡಿದ್ದಾರೆ.ಇದಕ್ಕೆ ಬಿಜೆಪಿ ಮುಖಂಡರು ಮಾತನಾಡುತ್ತ. ಈ ಪುರಸಭೆಯಲ್ಲಿ ಸ್ವಂತ ಮನೆಯ ಉತಾರ ನೀಡಲು ಟ್ಯಾಕ್ಸ್ ಕಟ್ಟಿದ ರಸೀದಿ ತೋರಿಸಿದರೆ ಮಾತ್ರಕೊಡುವ ವ್ಯವಸ್ಥೆ ಇದೆ. ಆದರೆ ಫಲಾನುಭವಿಗಳಿಂದ ಉತಾರ ನೀಡಲು ಒಂದು ಸಾವಿರ ರೂಪಾಯಿ ಪಡೆದು ಅದನ್ನು ಪುರಸಭೆ ಖಾತೆಗೆ ಜಮಾ ಮಾಡದೇ ಸುಮ್ಮನಿದ್ದು ನಾವೂ ಪ್ರತಿಭಟನೆ ಮಾಡುವ ಮುನ್ಸೂಚನೆ ಕೊಟ್ಟ ನಂತರ ತರಾತುರಿಯಲ್ಲಿ ತೆರಿಗೆ ಹಣವನ್ನು ಒಂದೇ ರಿಸಿಪ್ಟ್ ನಲ್ಲಿ ಜಮಾ ಮಾಡಿರುವದು ಹಣ ಗುಳಂ ಲೆಕ್ಕಾಚಾರದಲ್ಲಿದ್ದರೆ ಎಂದು ಪ್ರಶ್ನೆ ಹಾಕಿದರು.
ಕೊನೆಗೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಲಿಖಿತ ರೂಪದಲ್ಲಿ ಶೀಘ್ರದಲ್ಲಿ ಆಶ್ರಯ ಕಮೀಟಿಯವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಿ ಕೆಲವೇ ದಿನಗಳಲ್ಲಿ ಉತಾರ ನೀಡುವ ವ್ಯವಸ್ಥೆ ಮಾಡುತ್ತೇನೆ ಎನ್ನುವ ಮೂಲಕ ಪ್ರತಿಭಟನಾ ನಿರತರ ಮನಒಲಿಸಿದರು.
ಪ್ರಮುಖ ಅಂಶಗಳು.
* ಫಲಾನುಭವಿಗಳ ಉತಾರ ನೀಡಲು ಈಗಾಗಲೇ ಒಂದು ಕಾರ್ಯಕ್ರಮ ನಡೆದಿದೆ ಎರಡನೇ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡುವ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು.
* ಪುರಸಭೆ ಅಧ್ಯಕ್ಷರು ಬಹಿರಂಗ ಸಭೆಗೆ ಬರಲಿಲ್ಲ ಫಲಾನುಭವಿಗಳ ಮನಒಲಿಸುವ ಪ್ರಯತ್ನ ಮಾಡಲಿಲ್ಲ.
* ಬಹಿರಂಗ ಸಭೆಯಲ್ಲಿ ಹೆಚ್ಚುವರಿ ಹಣ ಸ್ವೀಕಾರ ಮಾಡಿದ್ದು ಬಹಿರಂಗ.
* ಉತಾರ ವಿತರಣೆ ವಿಳಂಬಕ್ಕೆ ತಾಂತ್ರಿಕ ಕಾರಣವಿಲ್ಲದೆ. ರಾಜಕೀಯ ದುರುದ್ದೇಶ ಸಾಬೀತು.
* ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಗೆ ಕದ್ದು ಮುಚ್ಚಿ ಉತಾರ ನೀಡಿದ್ದಾರೆ ಎಂದು ಆರೋಪ.
* ಪುರಸಭೆ ಸದಸ್ಯರು ಫಲಾನುಭವಿಗಳಿಂದ ಹಣ ಪಡೆದಿದ್ದಾರೆ ಎಂದು ಸಾಬೀತು.
* ಒಟ್ಟಾರೆ ಈ ಪ್ರತಿಭಟನೆಯಲ್ಲಿ ಬಿಜೆಪಿ ಕಾಂಗ್ರೇಸ್ ರಾಜಕೀಯ ಜಟಾಪಟಿಗೆ ಫಲನುಭವಿಗಳು ಕಂಗಾಲ್.
* ಈ ಪ್ರಕರಣದಲ್ಲಿ ದಲ್ಲಾಳಿಗಳ ಹಾವಳಿ ಪುರಸಭೆ ಅಧ್ಯಕ್ಷರೇ ಫಲಾನುಭವಿಗಳಿಂದ ಹಣ ಪಡೆಯಲು ಪ್ರೇರೆಪಿಸಿದ್ದರು ಎನ್ನುವ ಆರೋಪ.
* ಪುರಸಭೆ ಆವರಣದಲ್ಲಿ ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆಗೆ ಸಾಕ್ಷಿ.
ಈ ಸಂದರ್ಭದಲ್ಲಿ ಪುರಸಭೆ ವಿರೋಧ ಪಕ್ಷದ ನಾಯಕ ಮೂಕಪ್ಪ ನಿಡಗುಂದಿ, ಯು ಆರ್ ಚನ್ನಮ್ಮನವರ,ಯಮನೂರಪ್ಪ ತೀರಕೋಜಿ, ಸುಗೀರೇಶ ರಾಜೂರ, ರವಿ ಶಿಂಗ್ರಿ, ಉಮೇಶ ಚನ್ನು ಪಾಟೀಲ್, ಶಂಕರ ಇಂಜನಿ, ಬಾಳು ಬೋಸಲೇ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.